Monday, August 17, 2015

ರಂಗಿತರಂಗ

ರಂಗಿತರಂಗ



ಆಕಸ್ಮಿಕವಾಗಿ ಯೂ-ಟ್ಯೂಬ್ ನಲ್ಲಿ "ವರ್ಡ್ಸ್" (WORDS) ಎನ್ನೊ ಶಾರ್ಟ್-ಫಿಲ್ಮ್ ನೋಡಿದ್ದೆ, ಎರಡು-ಮೂರು ತಿಂಗಳ ಹಿಂದೆ. ಸ್ನೇಹಿತರೊಬ್ಬರು ಫೇಸ್‍ಬುಕ್ಕಿನಲ್ಲಿ "ರಂಗಿತರಂಗ" ಸಿನೇಮಾದ ಬಗ್ಗೆ ಪೋಸ್ಟ್ ಮಾಡಿ, ನನ್ನನ್ನು ಟ್ಯಾಗ್ ಮಾಡಿದ್ದಾಗಲೆ ಗೊತ್ತಾಗಿದ್ದು - ವರ್ಡ್ಸ್ ಶಾರ್ಟ್-ಫಿಲ್ಮ್ ನಿರ್ದೇಶಿಸಿದ್ದ ವ್ಯಕ್ತಿ ಇದೆ ಅನೂಪ್ ಭಂಡಾರಿ ಎಂದು!
ರಂಗಿತರಂಗದ ಟ್ರೈಲರ್ ನೋಡಿದೆ, ಇಂಟೆನ್ಸ್ ಹಾಗೂ ಗಮನ ಸೆಳೆಯುವಂತ್ತದ್ದು ಅನ್ನಿಸಿತ್ತು, ಏನೋ ಹೊಸತನದ ಜೊತೆಗೆ.
ಸೋ, "ಉಳಿದವರು ಕಂಡಂತೆ" ಸಿನೇಮಾದ ನಂತರ, ಬಹಳಷ್ಟು ಆಸಕ್ತಿಯಿಂದ ನಿರೀಕ್ಷಿಸಿರುವ ಸಿನೇಮಾ "ರಂಗಿತರಂಗ" ಎನ್ನಲಡ್ಡಿಯಿಲ್ಲ.

ನಿರೀಕ್ಷೆಯಂತೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಜನರನ್ನು ರೀಚ್ ಆಗಿ, ಬಹಳಷ್ಟು ಕುತೂಹಲವನ್ನು ಸೃಷ್ಟಿಸಿ, ಒಂದು ಉತ್ತಮವಾದ ಕನ್ನಡ ಸಿನೇಮಾಗೆ ಬೇಕಾಗಿರುವ ಎಲ್ಲಾ ಮಾರ್ಕೇಟಿಂಗ್ ನಡೆದಿತ್ತು.
ಇದೇ ಕಾರಣಕ್ಕೆ ಯು.ಎಸ್.ಏ ನಲ್ಲಿ ಮೂವಿ ಸ್ವಲ್ಪ ತಡವಾಗಿಯೆ ಬಿಡುಗಡೆಯಾದರೂ, ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲೆ ಜನ ಮೆಚ್ಚುಗೆ ಪಡೆದಿದೆ.

ಇದೊಂದು ಸಸ್ಪೆನ್ಸ್ ಸಿನೇಮಾವಾಗಿರುವುದರಿಂದ, ಆದಷ್ಟು ಸೂಚ್ಯವಾಗಿ ವಿಮರ್ಶೆ ಮಾಡಲು ಪ್ರಯತ್ನಿಸುತ್ತೇನೆ.
ಸಿನೇಮಾ ಬಗ್ಗೆ ಹೇಳಬೇಕೆಂದರೆ - ಅದ್ಭುತವಾದ ನಿರ್ದೇಶನ, ಸಸ್ಪೆನ್ಸ್, ಥ್ರಿಲ್ಲಿಂಗ್ ಎಲಿಮೆಂಟ್‍ನೊಂದಿಗೆ ಪ್ರೇಕ್ಷಕನನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುವಂತ ಕಥೆ-ಚಿತ್ರಕಥೆ,
ಸಾಯಿಕುಮಾರ್ ಒಬ್ಬರನ್ನು ಹೊರತುಪಡಿಸಿ ಹೆಚ್ಚು-ಕಡಿಮೆ ಹೊಸಬರನ್ನೆ ಬಳಸಿಕೊಂಡರೂ, ಉತ್ತಮವಾದ ಅಭಿನಯ, ಕಿವಿಗೆ ಹಿತವಾಗೆನಿಸುವ ಅನೂಪ್ ಭಂಡಾರಿಯವರ ಸಂಗೀತ, ಕಥೆಗೆ ಪೂರಕವಾಗಿ,
ಅಷ್ಟೆ ಬಿಗಿಯಾಗಿರುವ ಅಜನೀಶ್ ಅವರ ಹಿನ್ನಲೆ ಸಂಗೀತ, ಸುಂದರ ಕನ್ನಡ ಕರಾವಳಿಯನ್ನು ಮತ್ತೊಮ್ಮೆ ಅದ್ಭುತವಾಗಿ ಸೆರೆಹಿಡಿದ ಸಿನೇಮಾಟೊಗ್ರಾಫರ್ ಲಾನ್ಸ್ ಕಪ್ಲನ್ ಮತ್ತು ವಿಲ್ಲಿಯಮ್ ಡೆವಿಡ್ - ಒಂದು ಸಂಪೂರ್ಣ ಪ್ಯಾಕೇಜ್ ಡೀಲ್ ಅನ್ನಲು ಏನು ಅಡ್ಡಿಯಿಲ್ಲ!

ಸಿನೇಮಾದ ಆರಂಭದಿಂದಲೆ ಪ್ರೇಕ್ಷಕನ ಸಂಪೂರ್ಣ ಗಮನವನ್ನು ಸೆರೆಹಿಡಿದು, ಸೀಟಿಗೆ ಅಂಟಿಕೊಳ್ಳುವಂತೆ ಮಾಡುವುದೆ ಸಸ್ಪೆನ್ಸ್ ಚಿತ್ರಗಳ ಮೂಲ ಭಂಡಾರ.
ಅದರ ಜೊತೆಗೆ, ಮುಂದೆ ಏನು ಬರಬಹುದು ಎಂಬುವುದನ್ನು ಮೊದಲ ದೃಶ್ಯದಲ್ಲೆ ತೋರಿಸಿ ಪ್ರೇಕ್ಷಕನನ್ನು ಜಾಗ್ರತಗೊಳಿಸುವಂತೆ ಮಾಡಿ, ಆರಂಭದಲ್ಲೆ ನಿರ್ದೇಶಕನಿಗೆ ಗೆಲುವಿನ ಪ್ರಥಮ ರುಚಿ ದೊರಕಿದೆ.

ಯಾವುದೇ ಹಾಸ್ಯ ಕಲಾವಿದರಿಲ್ಲದಿದ್ದರೂ, ಪಾಂಡು-ಸಂಧ್ಯಾರ ಸಂವಾದ, ರಫೀಕ್‍ನ ಮುಗ್ಧ ಮಾತುಗಳಲ್ಲಿ ಕಿರುನಗೆ ತರಿಸುವ ನವಿರಾದ ಸಂಭಾಷಣೆಗಳಿವೆ.
ಸಂದರ್ಭಕ್ಕೆ ಸೂಕ್ತವಾಗಿ, ಚಿಕ್ಕದಾಗಿಯೂ ಬೇಕಾಗಿರುವ ವಿವರಣೆ ನೀಡುವ ಡೈಲಾಗ್ಸ್‍ನ ಜೊತೆಗೆ ಸಿನೇಮಾಟೊಗ್ರಾಫಿಯಲ್ಲೆ ವಿವರಣೆಯ ದೃಶ್ಯಕಾವ್ಯವನ್ನು ಮಾಡಿಸುವುದರಲ್ಲಿ ಸಫಲತೆ ಎದ್ದು ಕಾಣಿಸುತ್ತದೆ.
ನಾಯಕ ಹಾಗು ನಾಯಕಿ (ಗೌತಮ್-ಇಂದು) ದೋಣಿಯಲ್ಲಿ ಹೋಗುತ್ತಿರುವಾಗ ದೂರದಿಂದ ತೋರಿಸುವ ಮೊದಲ ದೃಶ್ಯದಲ್ಲಿ ನಾಯಕ ಮತ್ತು ಅಂಬಿಗ ಇಬ್ಬರೇ ಕಾಣಿಸುತ್ತಾರೆ.
ಕ್ಯಾಮೆರ ದೋಣಿಯನ್ನು ಸಮೀಪಿಸಿದಂತೆ ನಾಯಕನ ಮೈಗಂಟಿ ಕುಳಿತಿರುವ ನಾಯಕಿ ಕಾಣಿಸುತ್ತಾಳೆ. ಇದೊಂದು ಉದ್ದೇಶಪೂರ್ವಕವಾಗಿ ಮಾಡಿರುವ ದೃಶ್ಯವೆಂದು ಮೂವಿ ಮುಂದುವರಿಯುವಾಗ ಅರಿವಿಗೆ ಬರುತ್ತದೆ.
ನಾಯಕನ ಮನೆಯಿಂದ ಅವನ ವಾಚನ್ನು ಕದ್ದುಕೊಂಡು ಹೋಗುವ ಕೆಲಸದಾಕೆ (ರೇಣುಕ) ಮತ್ತು ನಾಯಕನಿಗೆ ಗುಂಡೇಟಿನಿಂದ ಗಾಯಗೊಳಿಸಿರುವ ಗರ್ನಾಲ್ ಬಾಬುವಿನ ನಡುವಿನ ಅನೈತಿಕ ಸಂಬಂಧವನ್ನು ಎಲ್ಲಿಯೂ ಸ್ಪಷ್ಟವಾಗಿ ಹೇಳದಿದ್ದರೂ, ಸೂಚ್ಯವಾಗಿ ಪ್ರೇಕ್ಷಕನ ಗಮನಕ್ಕೆ ಬರುವಂತೆ ಮಾಡಿದ್ದಾರೆ.
ಹೀಗೆ ಸೂಚ್ಯವಾಗಿ ವಿವರಣೆ ನೀಡುವ ಬಹಳಷ್ಟು ದೃಶ್ಯಗಳಿವೆ ಸಿನೇಮಾದಲ್ಲಿ.

ಈ ಸಿನೇಮಾದಲ್ಲಿ ಬರಿ ಗುಡ್ಡದ ಭೂತವೊಂದೆ ಅಲ್ಲ, ಮಾನಸಿಕ ಅಸ್ವಸ್ಥತೆಯ ಒಂದು ದೃಷ್ಟಿಕೋನ, ಅಕ್ರಮ ಮರಳು ಸಾಗಾಣಿಕೆ, ಪ್ರ್‍ಈತಿ-ಪ್ರಣಯ, ಭಾವನೆ, ಯಕ್ಷಗಾನ, ಮೂಡ-ನಂಬಿಕೆ, ಕರಾವಳಿಯ ಸಂಪ್ರದಾಯ ಎಲ್ಲವೂ ಇದೆ.
ಸಿನೇಮಾ ಉದ್ಯಮಕ್ಕೆ ಹೊಸಬರಾದರೂ, ನಿರೂಪ್ ಭಂಡಾರಿ (ನಾಯಕ), ರಾಧಿಕ ಚೇತನ್ (ನಾಯಕಿ), ಹಾಗೂ ಅವಂತಿಕ ಶೆಟ್ಟಿ (ಸಹ-ನಾಯಕಿ) ಉತ್ತಮವಾದ ನಟನೆಯಿಂದ ಗಮನ ಸೆಳೆಯುತ್ತಾರೆ, ವಿಶೇಷವಾಗಿ ರಾಧಿಕ ಚೇತನ್.
ಸಾಯಿಕುಮಾರ್ ಅವರು ಅವರ ಟಿಪಿಕಲ್ ಪಾತ್ರ ಆಯ್ಕೆಯಿಂದ ಹೊರಬಂದು ಒಂದು ಅದ್ಭುತವಾದ ರೋಲ್ ಮಾಡಿದ್ದಾರೆ.
ಕಿರುತೆರೆಯ ಬಹಳಷ್ಟು ಅನುಭವಿ ಕಲಾವಿದರಿಗೆಲ್ಲ ಅವಕಾಶ ಕೊಡಲಾಗಿದೆ, ವಿಶೇಷವಾಗಿ ಶಂಕರ ಮಾಷ್ಟರಾಗಿ ಅನಂತ ವೇಲು, ಇನ್‍ಸ್ಪೆಕ್ಟರಾಗಿ ಅರವಿಂದ ರಾವ್, ಚಿಕ್ಕ ಪಾತ್ರವಾದರೂ ಮಹಾಬಲ ಹೆಗ್ಡೆಯಾಗಿ ಶಂಕರ್ ಅಶ್ವತ್.

ಹಾಗಂತ ನೂನ್ಯತೆಗಳಿಲ್ಲ ಅಂತಲ್ಲ! ಕೆಲವೊಂದು ಚಿಕ್ಕ-ಪುಟ್ಟ ತಾಂತ್ರಿಕ ಹಾಗೂ ಎಡಿಟಿಂಗ್ ತಪ್ಪುಗಳಿವೆ (ನನ್ನ ಗಮನಕ್ಕೆ ಬಂದಂತವು, ಅಥವಾ ಅನ್ನಿಸಿದ್ದು)
೧. ರಫೀಕ್ ಜೀಪನ್ನು ಗೌತಮ್‍ಗೆ ಕೊಡುವಾಗ ರೋಡ್ ಸರಿ ಇಲ್ಲ, ಅರ್ಧ ಗಂಟೆಯ ದಾರಿ ಎಂದ ನೆನಪು. ಆಗ ಇನ್ನೂ ಸರಿ ಬೆಳಕಿತ್ತು. ಆದರೆ ಗೌತಮ್ ಮತ್ತು ಇಂದು ಕಾರನ್ನು ಬಿಟ್ಟು ಕಮರಟ್ಟು ಮನೆಗೆ ಹೋಗುವಷ್ಟರಲ್ಲಿ ಗಾಡ ಕತ್ತಲಾಗಿತ್ತು!
೨. ಗೌತಮ್‍ನನ್ನು ಇನ್‍ಸ್ಪೆಕ್ಟರ್ ವಿಚಾರಣೆ ಮಾಡುವ ದೃಶ್ಯ ರಾತ್ರಿಯ ಸಮಯ (ಪೊಲೀಸ್ ಸ್ಟೇಶನಿನಲ್ಲಿ ಲೈಟ್ ಉರಿಯುತ್ತಿರುತ್ತದೆ, ಹಾಗೂ ಹೊರಗೆ ಕತ್ತಲಿರುತ್ತದೆ). ಅದೆ ಸಮಯಕ್ಕೆ ನಾವುಡರ ಸನ್ನಿವೇಶವು ಸಮಾನಂತರವಾಗಿ ಬರುತ್ತಿರುತ್ತದೆ. ಆದರೆ, ಆ ಸನ್ನಿವೇಶ ಬೆಳಗಿನ ಸಮಯದಲ್ಲಿ.
೩. ಗೌತಮ್ ಮತ್ತು ಸಂಧ್ಯಾ ಇಬ್ಬರು ಪೋಲೀಸ್ ಸ್ಟೇಶನ್‍ಗೆ ಹೋಗುವಾಗ ಜೋರು ಮಳೆ ಬರುತ್ತಿರುವ ಕಾರಣ, ಸಂಧ್ಯಾ ಕೊಡೆಯನ್ನು ಬಳಸುತ್ತಾಳೆ. ಆದರೆ ಅಲ್ಲಿಂದ ಹಿಂತಿರುಗುವಾಗ ಕೊಡೆ ಸಂಪೂರ್ಣವಾಗಿ ಒಣಗಿರುತ್ತದೆ.
೪. ಹರಿಣಿಯ ಡೈರಿ ಓದುತ್ತಾ, ಇಂದು-ಗೌತಮ್-ಹರಿಣಿ ಇವರ ಫ್ಲಾಶ್-ಬ್ಯಾಕ್ ಮತ್ತು ಸಮಾನಂತರವಾಗಿ ನಡೆವ ಸಂಧ್ಯಾ ಯೋಚಿಸುತ್ತಿರುವ ಸಿದ್ಧಾರ್ಥ್-ಸಂಧ್ಯಾ ಇವರ ಫ್ಲಾಶ್-ಬ್ಯಾಕ್ ಎರಡರಲ್ಲೂ ಸಾಂಗ್ಸ್ ಬಂದು (ಎರಡು ಹಾಡುಗಳು ಚೆನ್ನಾಗಿವೆ) ಅವಸರದಲ್ಲಿ ತುರುಕಿಸಿದಂತೆ ಅನ್ನಿಸಿತು.
೫. ಅನಂತ ವೇಲು ಮತ್ತು ಸಾಯಿ ಕುಮಾರ್ ಇಬ್ಬರು ಉತ್ತಮ ನಟರು, ಆದರೆ ನಾವುಡರು ಮತ್ತು ಶಂಕರ ಮಾಸ್ಟ್ರು - ಇಬ್ಬರ ಮಾತಿನಲ್ಲಿ ಕರಾವಳಿಯ ಗ್ರಾಮ್ಯ ಭಾಷೆ ಇಲ್ಲದಿರುವುದು ಒಂದು ದೊಡ್ಡ ನೂನ್ಯತೆ ಅನ್ನಿಸಿತು ನನಗೆ.

ಇಷ್ಟೆಲ್ಲರ ನಡುವೆ, ಹೊಸಬರ ಹೊಸ ಪ್ರಯೋಗದಲ್ಲಿ ಪರಿಶ್ರಮ ಎದ್ದು ತೋರುತ್ತದೆ, ಬಹಳಷ್ಟು ಹೊಸತನ/ತಾಜಾತನ ಕಾಣಿಸುತ್ತದೆ.
ಸಿನೇಮಾದ ಮೊದಲಾರ್ಧದಲ್ಲಿ ಆಗುವ ಭಯವನ್ನು, ದ್ವಿತಿಯಾರ್ಧದಲ್ಲಿ ಕುತೂಹಲವನ್ನಾಗಿ ಪರಿವರ್ತಿಸಿ, ಅಂತಿಮವಾಗಿ ಅನಿರೀಕ್ಷಿತ ಹಾಗು ನಂಬಲಾರ್ಹವಾದ ಉಪಸಂಹಾರವನ್ನು ಕೊಟ್ಟು ಒಂದು ಅದ್ಭುತವಾದ ಸಿನೇಮಾವನ್ನು ಕನ್ನಡ ಪ್ರೇಕ್ಷಕನ ಮುಂದಿಟ್ಟಿದ್ದಾರೆ.
ನಾನು ನೋಡಿರುವ ಸಿನೇಮಾಗಳಲ್ಲಿ ಇದೊಂದು ಉತ್ತಮವಾದ ಚಿತ್ರ!

- ಗಿರೀಶ್ ಶೆಟ್ಟಿ

Sunday, August 16, 2015

ಉಪ್ಪಿಟ್ಟು ಸಿನೇಮಾ ವಿಮರ್ಶೆ

ಉಪ್ಪಿಟ್ಟು






ಸೂಪರ್‍ ಸಿನೇಮಾದ ನಂತರ ಬಹಳಷ್ಟು ಟೈಮ್ ತಗೊಂಡು, ಉಪೇಂದ್ರ ಅವರು ಡೈರೆಕ್ಟರ್ ಹ್ಯಾಟ್ ಹಾಕಿರೊ ಸಿನೇಮಾ ಅಂದ ತಕ್ಷಣ ಜನರಲ್ಲಿ ನಿರೀಕ್ಷೆ ಇದ್ರೆ ಏನು ತಪ್ಪಿಲ್ಲ.
ಉಪೇಂದ್ರ ಅವರು ಇಟ್ಟಿರೊ ಹವಾನೆ ಹಂಗೆ, ಡಿಫರೆಂಟಾಗಿ, ವಿಚಿತ್ರವಾಗಿ, ಉಲ್ಟಾ-ಸೀದಾವಾಗಿ, ಹುಳ-ಹಾವು ಬಿಟ್‍ಬಿಟ್ಟು ಕಥೆ ಹೇಳೊದೆ ಅವರ ಸ್ಪೆಷಾಲಿಟಿ ಅಂದ್ರೆ ತಪ್ಪಲ್ಲ.

ಸರಿ - ನೇರ "ಉಪ್ಪಿಟ್ಟಿಗೆ" ಬರೋಣ.
ಕಥೆ ಎನಪ್ಪ ಅಂದ್ರೆ, ಏನು ಇಲ್ಲ!
ಮತ್ತೇನು ಎರಡೂವರೆ ಗಂಟೆ ಏನ್ ನೋಡಿ ಬಂದೆ ಗುರು ಅಂತ ಯಾರಾದ್ರು ಕೇಳಿದ್ರೆ, ಅಲ್ಲೆ ಇರೋದು ವಿಷ್ಯ!
ಹೆಂಗೆ ಮುಗ್ಸಿದಾನೆ ಉಪ್ಪಿ ಸಿನೇಮಾನ?
ಹಂಗೆ ಈಸಿಯಾಗಿ ಹೇಳಕ್ಕಾಗಲ್ಲಮ್ಮಾ! ಏನಂದ್ರೆ "ಜಾಸ್ತಿ ಯೋಚನೆ ಮಾಡ್‍ಬೇಡ, ಹಂಗೆ ಒಮ್ಮೆ ನೋಡ್‍ಕೊಂಡು ಬಾಪ್ಪಾ"
ಥೂ! ಹೋಗ್ಲಿ! ಕ್ಲೈಮ್ಯಾಕ್ಸ್ ಹೇಳಕ್ಕಾಗಲ್ಲ ಅಂದ್ರೆ ಬಿಟ್‍ಹಾಕು, ಹೆಂಗೆ ಫಿಲಮ್ ಶುರುಮಾಡಿದಾನೆ ಉಪ್ಪಿ?
ಫಿಲಮ್ ಶುರುನಲ್ಲೆ ಎಂಡಾಗತ್ತೆ, ಎಂಡಲ್ಲಿ ಫಿಲಮ್ದು ಟೈಟಲ್ ಬರತ್ತೆ.
ಲೋ, ಏನೋ ಅಂತಿದ್ದೀಯ ನೀನು! ನಂಗೆ ತಲೆ-ಬುಡ ಎರಡೂ ಅರ್ಥ ಆಗ್ತಿಲ್ಲ!
ಹೂನಪ್ಪಾ, ಉಪ್ಪಿದಲ್ವಾ ಸಿನೇಮಾ, ಇನ್ ಹ್ಯಾಂಗಿರಕ್ಕೆ ಸಾಧ್ಯ?
ಅವನಜ್ಜಿನ ತಂದು! ಹಾಳಾಗಿ ಹೋಗ್ಲಿ, ನಾನು ನೋಡ್‍ಕೊಂಡೇ ಬರ್ತೀನಿ, ಅದೇನು ಕಿತ್ತಾಕಿದಾನೆ ಈ ಸಿನೇಮಾದಲ್ಲಿ ಅಂತ!
ಹಾಗೆ ಬಾ ದಾರಿಗೆ!

ನಾನೇನು ತೀರಾ ಉಪೇಂದ್ರ ಫ್ಯಾನಲ್ಲ, ಆದ್ರೆ ಅವರ ಕೆಲವೊಂದು ಸಿನೇಮಾನ ಬಹಳ ಮೆಚ್ಚಿದ್ದೀನಿ, ಹೆಚ್ಚಾಗಿ ಡೈರೆಕ್ಷನ್‍ನ.
ಉಪೇಂದ್ರ ಆಕ್ಟಿಂಗ್ ಬಗ್ಗೆ ಜಾಸ್ತಿ ಏನಿಲ್ಲ, ಕೆಲವೊಮ್ಮೆ ಓವರ್-ಆಕ್ಟಿಂಗ್ ನೋಡಿ ಅರ್ಧಕ್ಕೆ ನಿಲ್ಸಿರೊ ಫಿಲಮ್‍ಗಳು ಉಂಟು, ರಕ್ತ-ಕಣ್ಣೀರು ಒಂದು ಹೊರತುಪಡಿಸಿ.
ತರಲೆ ನನ್ ಮಗ, ಶ್!, ಓಂ, ಆಪರೇಶನ್ ಅಂತ, ಸ್ವಸ್ಥಿಕ್ - ಎಲ್ಲಾ ವಿಭಿನ್ನವಾಗಿರೊ ಕ್ಯಾಟಗರಿ, ಬೇರೆ ಬೇರೆ ನಾಯಕ ನಟರು, ಒಳ್ಳೆ ಸಿನೇಮಾಗಳು.
ಏ, ಉಪೇಂದ್ರ, ಸೂಪರ್, ಉಪ್ಪಿಟ್ಟು - ಅವರೆ ನಾಯಕ. ಆದ್ರೆ, ಎಲ್ಲಾದರಲ್ಲೂ ಏನೋ ಒಂದು ಸಾಮ್ಯತೆ ಇರೊ ಸಿನೇಮಾಗಳು. ಡಿಫರೆಂಟಾಗಿದೆ, ಆದ್ರೆ ಬೇರೆಯವರ ಸಿನೇಮಾದಿಂದ, ಉಪೇಂದ್ರ ಅವರ ಸಿನೇಮಾದಿಂದಲ್ಲ.

ಉಪ್ಪಿಟ್ಟು ನಲ್ಲಿ ಒಂದು ಸಿಂಪಲ್ (ಆದರೆ ಒಳ್ಳೆಯ) ಐಡಿಯೋಲಜಿನ ಇಟ್ಕೊಂಡು ಕಥೆ (ಎನ್ ಕಥೆ ಅಂತ ಕೇಳ್ಬೇಡಿ) ಕಟ್ಟಿರೋದು.
ಯೋಚನೆ ಮಾಡದೆ ವರ್ತಮಾನದಲ್ಲಿ ಬದುಕುವುದಕ್ಕೆ ಪ್ರಯತ್ನಪಟ್ಟರೆ "ನೀನು" ಖುಶಿಯಾಗಿರ್ತೀಯ!
ಹಾಗಿರಕ್ಕೆ ಏನಪ್ಪಾ ಬೇಕು ಅಂದ್ರೆ - ಖುಶಿಯಾಗಿ ಇರೋದಕ್ಕೆ "ಇಷ್ಟ"/"ಇರಾದೆ" ಬೇಕು.
ತಲೇಲಿ ಇರೊ ಮೆದುಳನ್ನು ಭೂತ-ಭವಿಷ್ಯದ ಬಗ್ಗೆ ಅನಾವಶ್ಯಕ ಉಪಯೋಗಿಸೊ (ಹಾಳು ಮಾಡೊ) ಬದಲು, ಈಗಿರೊ ಕ್ಷಣಕ್ಕೆ ಬಿಟ್ಟಿರು.
ಇದೇಲ್ಲಾವನ್ನು ಯೋಚನೆ ಮಾಡಿ, ಇನ್‍ಮೇಲಿಂದ ಯೋಚನೆನ ಮಾಡೋದೇ ಬೇಡ ಅಂತ ನಿರ್ಧಾರ ಮಾಡಿರ್‍ತಾನೆ "ನೀನು".
ನಡುವೆ ಗ್ಯಾಪಲ್ಲಿ ಭೂತಕಾಲದ "ನಾನು" ರೌಡಿಗಳ ಜೊತೆ, ಭವಿಷ್ಯದ "ಅವನು" ಪೋಲೀಸರ ಜೊತೆ ಬಂದು ಹೋಗ್ತಾ, ಕನ್ಫ್ಯೂಷನ್‍ಗೆ ಬೇಕಿರೊ ಎಲ್ಲಾ ಅಂಶಗಳನ್ನು ತುರುಕಿಸಿದ್ದಾರೆ ಉಪ್ಪಿ.
ಗೊಂದಲ ಸೃಷ್ಟಿಸುವುದು (ತಲೆಗೆ ಹುಳ ಬಿಡೋದು) ಉಪೇಂದ್ರ ಅವರ ಮೂಲ ವಿಚಾರವಾಗಿದ್ದರೂ, ಕೆಲವೊಂದು ಅನಾವಶ್ಯಕ ಅನ್ನಿಸುವಷ್ಟಿತ್ತು.
ಕಥಾವಸ್ತುವಿನಲ್ಲಿನ ಲೂಪ್‍ಹೋಲ್ಸ್ ಅಥವಾ, ಉಪ್ಪಿಯ ಉದ್ದೇಶವೆ ಅದೆ ಆಗಿರಬಹುದು - ಆದರೆ, ಕೆಲವೊಂದು ವಿವರಣೆಗೆ ನಿಲುಕದ ಎಳೆಗಳಿವೆ, ಮುಖ್ಯವಾಗಿ:
೧. ನಾಯಕಿ ಮತ್ತು ರೌಡಿಗಳ ಸಂಭಂದ, ಅಪ್ಪ-ಮಗಳು ಅನ್ನಿಸುವಷ್ಟರ ಮಟ್ಟಿನ ಕಮ್ಯುನಿಕೇಷನ್ ಇತ್ತು
೨. ನಾಯಕಿಗೆ ನಾಯಕ ಇಷ್ಟ ಆಗಲು ಇರುವ ಕಾರಣಗಳು (ನನಗೆ) ಕನ್‍ವೆನ್ಸಿಂಗ್ ಇರಲಿಲ್ಲ - ಲವ್ ಅಟ್ ಫಷ್ಟ್ ಸೈಟ್!?
೩. ಪಾರುಲ್ ಯಾದವ್ ನ ಕಥೆಯನ್ನ ಯಾಕೆ, ಹೇಗೆ ಒಮ್ಮಿಂದಲ್ಲೆ ನಂಬಿದಳು ನಾಯಕಿ ಅನ್ನುವುದು ಕೂಡ ಕನ್‍ವೆನ್ಸಿಂಗ್ ಇರಲಿಲ್ಲ
೪. ನಾಯಕನ ತಂಗಿಗೆ ತೊಂದರೆ ಕೊಡುತ್ತಿದ್ದವನ ಕೊಲೆ - ಯಾರಿಂದ, ಯಾಕೆ!

ಓಪನ್ ಎಂಡೆಡ್ ಎಳೆಗಳು ಇರಬಹುದು, ಆದರೆ ಗೊಂದಲಕ್ಕೋಸ್ಕರ ಸೃಷ್ಟಿಮಾಡಿರೊ ಎಳೆಗಳು ಈ ಕಥೆಗೆ ಸೂಕ್ತವಾಗಿಲ್ಲವೇನಿತ್ತೊ.
ಹಾಡುಗಳು ಅಷ್ಟಕ್ಕಷ್ಟೆ, ಸಿನೇಮಾಟೊಗ್ರಾಫಿ ಸಾಮಾನ್ಯ. ಪ್ರತಿ ಫ್ರೇಮಿನಲ್ಲಿ ರಿಚ್‍ನೆಸ್ ಕಾಣಿಸಲು ಬಹಳಷ್ಟು ಅವಕಾಶವಿದ್ದರೂ, ಸರಿಯಾಗಿ ಉಪಯೋಗಿಸಿಕೊಂಡಿಲ್ಲ!
ನಟನೆಯಲ್ಲಿ ಗಮನಾರ್ಹ ರೋಲ್ಸ್ ನನ್ನ ಕಣ್ಣಿಗೆ ಬಿದ್ದಿಲ್ಲ, ಹೊಸ ನಾಯಕಿ, ಹೊಸದಾಗೆ ಕಾಣಿಸ್ತಾಳೆ, ಹಳೆ ಕಲಾವಿದರಿಗೆಲ್ಲ ಉಪ್ಪಿ ಒಂದು ಚಾನ್ಸ್ ಕೊಟ್ಟಿದ್ದಾರೆ.

ನವರಸ ನಾಯಕರ ಕಟ್ಟಾ ಅಭಿಮಾನಿಯೊಬ್ಬ "ಏನ್ ಕಿತ್ತಾಕಿದಾನೆ ನಿಮ್ ಉಪ್ಪಿ ಈ ಮೂವಿಲಿ, ಅದೆ ಹಳಸಿರೊ ನೀನು ಬಿಟ್ಟು?
ಹಳೆ ಚಪ್ಪಲಿಗೆ ಅಂಟಿರೊ ದನದ ಗೂಸ ತರ, ಇನ್ನೂ ಅದ್ರಲ್ಲೆ ತಗಲಾಕೊಂಡಿದ್ದಾನೆ" ಅಂದಿದಕ್ಕೆ,
ಉಪ್ಪಿ ಅಭಿಮಾನಿ ಅಂದ, "ಹಳೆ ಹ್ಯಾನ್ಗೋವರ್ ಇರೋದಿಂದ್ರಾನೆ ಇದಕ್ಕೆ ಉಪ್ಪಿಟ್ಟು ಅಂತ ಹೆಸರಿಟ್ಟಿರೋದು, ಇಲ್ಲಾಂದ್ರೆ ಡಗಾರ್ ಅಂತಾನೆ ಸಿನೇಮಾ ಮಾಡಿರೋನು ನಮ್ ಉಪ್ಪಿ.
ಕೆಲ್ಸಾ ಇಲ್ದಿರೊ ಯಾವೊನೊ ಒಬ್ಬ, ಎನನ್ನೊ ಕೆರ್ಕಳಕ್ಕೆ ಹೋಗಿ, ಇನ್ನೇನೊ ಮಾಡ್ಕೊಂಡ ಅಂತೆ - ಹಾಂಗಾಯ್ತು ನಿನ್ ಕಥೆ. ಡ್ಯಾಶ್ ಮುಚ್ಕೊಂಡು ಸುಮ್ನೆ ಹೊಯ್ತಾ ಇರು, ಅವ್ವ್, ಕಚ್‍ಬುಡ್ತೀನಿ"

ಒಟ್ನಲ್ಲಿ ಉಪ್ಪಿ ಕ್ಲಾಸ್ ಐಡಿಯ ಇಟ್‍ಕೊಂಡು, ಮಾಸ್ ಮೂವಿ ಮಾಡಿ, ತಲೆಕೆಡಿಸುವುದರಲ್ಲಿ "ಎತ್ತಿದ ಕೈ" ಎಂದು ಇನ್ನೊಮ್ಮೆ ತೋರಿಸಿಕೊಟ್ಟಿದ್ದಾರೆ.

- ಗಿರೀಶ್ ಶೆಟ್ಟಿ

Sunday, April 27, 2014

ನಾನು ಕಂಡ "ಉಳಿದವರು ಕಂಡಂತೆ"


ನಾನು ಉಡುಪಿಯವನು, ಈ ಸಿನೇಮಾದ ಬಗೆಗಿನ ನನ್ನ ಅನಿಸಿಕೆ ಅಥವಾ ನಿಲುವು ನಿರ್ವಾಜ್ಯವಾಗಿಲ್ಲದೆ ಇರಬಹುದೇನೊ! ಆದರೂ ನನಗನಿಸಿದ್ದು, ನಾನು ಕಂಡ "ಉಳಿದವರು ಕಂಡಂತೆ":

ಕಪ್ಪು ಕಾಗೆಗೆ ಮಿಕ್ಕಿರೊ ಬಣ್ಣ ಎಲ್ಲಾ ಕಾಣಿಸುತ್ತಾ?
ಥಿಯೇಟರಿನಿಂದ ಸಿನೇಮಾ ನೋಡ್ಕೊಂಡು ಆಚೆ ಬಂದ ಪ್ರೇಕ್ಷಕನಿಗೆ ಅವನ ಅರಿವಿಕೆಯ ಉದ್ದಗಲಕ್ಕೆ ಮೀರಿದ ಬೇರೆ ಆಯಾಮಗಳು ಕಾಣಿಸುತ್ತಾ?

ಕೆಲವೊಂದು ದೃಶ್ಯಗಳಲ್ಲಿ ಕರಾವಳಿಯ ಸೌಂದರ್ಯದ ಅನಾವರಣ ಅಮೋಘ, ವಿಶೇಷವಾಗಿ ಸಿನೇಮಾದ ಆರಂಭದ ದೃಶ್ಯ, ಅದ್ಭುತವಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ಸಿನೇಮಾಟೊಗ್ರಾಫಿಯ ಬಗ್ಗೆ ಎರಡು ಮಾತಿಲ್ಲ. ಅದಕ್ಕೆ ಪೋರಕವಾಗಿ ಹಿನ್ನೆಲೆಯಲ್ಲಿ ಶೀತಲ್ ಶೆಟ್ಟಿಯ ನಿರೂಪಣೆ.

ಸಿನಿಮಾದ ಹೆಸರೇ ಸೂಚಿಸುವಂತೆ, ನಿರ್ದೇಶಕ ಇಲ್ಲಿ ಒಂದು ನಿರ್ದಿಷ್ಟ ಅಂತ್ಯ ಅಥವಾ ಉತ್ತರದ ಗೋಜಿಗೆ ಹೋಗಿಲ್ಲ.
ನನಗನಿಸಿದ ಮಟ್ಟಿಗೆ, ಒಂದು ಘಟನೆಯನ್ನು ನೇರಕ್ಕಿಂತ ಹೆಚ್ಚಾಗಿ ಪರೋಕ್ಷವಾಗಿ ನೋಡಿದವರು, ಭಾಗಿಯಾದರು ಅವರವರ ದೄಷ್ಟಿಕೋನಕ್ಕನುಗುಣವಾಗಿ ನಿರೂಪಿಸುವುದು ನಿರ್ದೇಶಕನ ಆಶಯ. ಅದಕ್ಕೆ ಅವನು ಕಂಡುಕೊಂಡ ಮಾಧ್ಯಮ ಒಬ್ಬಳು ಪತ್ರಕರ್ತೆ.
ಅವಳ ನಿಲುವು ಅದೆಷ್ಟು ತಟಸ್ಥವಾಗಿದ್ದರೂ, ಆ ಘಟನೆಯ ಒಂದು ಪ್ರಮುಖ ಪಾಲುದಾರನ ಬದುಕಿನ ನಿರ್ದಿಷ್ಟ ಘಟ್ಟಕ್ಕೆ ಅವಳು ಸಾಕ್ಷಿದಾರಳಾಗಿರುವುದರಿಂದ ಅವಳ ಅನಿಸಿಕೆಗಳು ಈ ಕಥೆಯ ನಿರೂಪಣೆಯಲ್ಲಿ ಇಲ್ಲ ಅನ್ನುವುದು ಸ್ವಲ್ಪ ಅಸಾದ್ಯ.

ನಿರ್ದೇಶಕ, ಪ್ರತಿಯೊಂದು ದೃಶ್ಯದಲ್ಲೂ ಆದಷ್ಟು ವಿವರಗಳನ್ನು ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾನೆ, ಹಾಗೂ ಸಾಕಷ್ಟು ಕಡೆ ಗೆದ್ದಿದ್ದಾನೆ.
ಪೇಪರ್ ಪೇಪರ್ ಸಾಂಗ್‍ನಲ್ಲಿಯ ಮಕ್ಕಳ ನೃತ್ಯ, ಹುಲಿ ವೇಷದವರ ಡಾನ್ಸಿಗೆ "ಬಾ ಬಾರೊ ರಣಧೀರ" ಹಾಗು "ಸಂತೋಷಕ್ಕೆ ಹಾಡಿ ಸಂತೋಷಕ್ಕೆ" ಬೀಟ್ಸ್, ತಾರ ಮೀನ್ ಸಾರ್ ಮಾಡುವಾಗಿನ ಸನ್ನಿವೇಶದಲ್ಲಿ ಡಿಟೈಲ್ಸ್‍ಗೆ ಕೊಟ್ಟ ಪ್ರಾಮುಖ್ಯತೆ, ಹಿನ್ನೆಲೆಯಲ್ಲಿ ಮಧ್ಯೆ ಮಧ್ಯೆ ಬಂದು ಕಚಗುಳಿ ಇಟ್ಟು ಹೋಗುವ "ಕಾಕಿಗ್ ಬಣ್ಣ ಕಾಂತ?" ಹಾಡಿನ ಶೃತಿ, ಯಕ್ಷಗಾನದ ಹಿನ್ನೆಲೆಯಲ್ಲಿ "ಅದು" ಏನಿರಬಹುದು ಎಂದು ಪ್ರೇಕ್ಷಕನ ತಲೆಯಲ್ಲಿ ಹುಳ ಬಿಡುವ ಯಶಸ್ವಿ ಪ್ರಯತ್ನ, ಚರ್ಚಿನ ಒಳ ಹೋಗುವ ಮುಂಚೆ ಚಪ್ಪಲನ್ನು ಪಕ್ಕಕ್ಕಿಟ್ಟು ಹೋಗುವ ದೃಶ್ಯದಲ್ಲಿ ಹುಡುಗನಿಗೆ ಚರ್ಚಿನ ಬಗೆಗಿರುವ ಗೌರವ, ಹಿನ್ನೆಲೆಯಲಿ ಸಂದರ್ಭಕ್ಕೆ ಸಮಂಜಸತೆ ಕೊಡುವ ಹಾಡು "ಅದೇನೋ ಹೇಳಲು ಬಂದವನು, ಹೇಳದೆ ಮಾತನುಳಿಸುಕೊಂಡು ಹೋದನು". ಸಣ್ಣ-ಪುಟ್ಟ ವಿಚಾರಗಳಿಗೆ ಪ್ರಾಮುಖ್ಯತೆ ಕೊಡುವುದರೊಂದಿಗೆ ಪಾತ್ರದ ವ್ಯಕ್ತಿತ್ವವನ್ನು ತಿಳಿಸುವ ರೀತಿ ನನಗಿಷ್ಟವಾಯಿತು.

ಸಿನೇಮಾದ ಹಿನ್ನಲೆ ಸಂಗೀತ ಹಾಗೂ ಹಾಡುಗಳ ಬಗ್ಗೆ ಎರಡು ಮಾತಿಲ್ಲ, ಸಂಗೀತಕ್ಕೆ ಸರಿಯಾಗಿ ಜೊತೆಯಾದ ಸಾಹಿತ್ಯ; ಮುತುವರ್ಜಿಯಿಂದ ಪೋಣಿಸಿದ ಮುತ್ತಿನಸರದಂತೆ ರಂಜಿಸಿಸುವುದರಲ್ಲಿ ಮೋಸವಿಲ್ಲ.
ಕಥೆಯ ನಿರೂಪಣೆಯಲ್ಲಿ, ಪಾತ್ರಪೋಷಣೆಯಲ್ಲಿ, ಹಾಗೂ ಸಂಗಿತದಲ್ಲಿ ಕೆಲವೊಂದು ಹಾಲಿವುಡ್ ಚಿತ್ರ/ನಟರ ಸ್ಪೂರ್ತಿ ಕಾಣಸಿಗುತ್ತದೆ.

ಸಿನೇಮಾದಲ್ಲಿ ತಪ್ಪುಗಳಿಲ್ಲ ಅಂತಲ್ಲ, ಸುಮಾರಷ್ಟು ಗಮನಕ್ಕೆ ಬರಬಹುದು, ಗಮನಾರ್ಹವಾಗಿ ಕೆಲವೊಂದು ಸಂಭಾಷಣೆಗಳಲ್ಲಿ ರತ್ನಕ್ಕನ ಬೆಂಗಳೂರು ಕನ್ನಡ, ಉಡುಪಿಯವನಾದರೂ ರಘು ಮಾತಾಡುವಾಗೆಲ್ಲ ಉಡುಪಿ ಕನ್ನಡ ಅಥವಾ ತುಳುವಿನ ಉಚ್ಛಾರಣೆಯಿಲ್ಲದಿರುವುದು.

ಇಲ್ಲದ ಕಾಗೆಯನ್ನು ಅಟ್ಟಿಸಿಕೊಂಡು ಹೋಗುವ, ಬಂಗಿ ಸೇದುವ ಬಾಲುವಿನ ಕಥೆಯನ್ನು ಸಂಪೂರ್ಣ ನಂಬುವಂತಿಲ್ಲ.
ಸ್ನೇಹಿತನ ಬಗೆಗಿನ ಪಕ್ಷಪಾತದ ಒಂದು ಸಣ್ಣ ಸಂದೇಹದ ಸುಳಿಯಿಂದಾಗಿ, ರಿಚ್ಚಿ ರಘುವನ್ನು ಸಾಯಿಸಿಲ್ಲ ಎನ್ನುವ ರಿಚ್ಚಿಯ ಗೆಳೆಯ ದಿನೇಶನು ಕಥೆಯನ್ನೂ ನಂಬುವಂತಿಲ್ಲ.
ಶೈಲೇಶನ ಕಥೆಯಲ್ಲಿ ಅಂತೆ-ಕಂತೆಗಳೆ ತುಂಬಿವೆ. ಅವನು ನೇರವಾಗಿ ಕಂಡಿರುವ ಘಟನೆಗಳು ಒಂದೂ ಇಲ್ಲ.
ಶಂಕರ್ ಪೂಜಾರಿ ರಿಚ್ಚಿಗೆ ಹಾಗೂ ಮುನ್ನನಿಗೆ ಗುಟ್ಟಾಗಿ ಹೇಳಿರುವ ವಿಷಯ ಕೊನೆಗೂ ಗುಟ್ಟಾಗೆ ಉಳಿಯಿತು.
ರತ್ನಕ್ಕನ ದೃಷ್ಟಿಕೋನದ ಕಥೆಯಲ್ಲಿ ಬರದ ಮಗನಿಗಾಗಿ ರತ್ನಕ್ಕ ಕಾದಿದ್ದಷ್ಟೆ ಸಿಗುತಿತ್ತೇನೊ? ಅದಕ್ಕೆ ಇರಬೇಕು, ಪ್ರೇಕ್ಷಕ ಅವಳ ಕಥೆಗೆ ಕಾಯುವಂತೆ ಮಾಡಿದ್ದಾನೆ ನಿರ್ದೇಶಕ!
ಕತ್ತಲಿಗೆ ಹೆದರುವ ಡೆಮಾಕ್ರಸಿಯ ಕಥೆಯಲ್ಲಿ ಕನಸು ಮತ್ತು ಮುಗ್ಧತೆಯ ಹೊರತು ಬೇರೇನು ಸಿಗದೇನೊ! ಅಲ್ಲಿಯೂ ನಿರ್ದೇಶಕ ಕಾಡಿಸಿ ಬಿಟ್ಟಿದ್ದಾನೆ.

ನಿರ್ದೇಶನದ ಜೊತೆಗೆ ಅದ್ಭುತವಾದ ಮ್ಯಾನರಿಸಂನಿಂದ ರಿಚ್ಚಿಯ ಪಾತ್ರ ಮಾಡಿ ನಟನಾಗಿಯೂ ಗೆದ್ದಿದ್ದಾನೆ ರಕ್ಷಿತ್.
ಉಳಿದಂತೆ ತಾರ, ಕಿಶೋರ್, ಬಾಲ ನಟ ಸೋಹನ್, ವಿಶೇಷವಾಗಿ ಅಚ್ಚುತ್ ಎಲ್ಲರ ನಟನೆ ಮೆಚ್ಚುವಂತದ್ದು.
ಚಿಕ್ಕದಾದರೂ ಚೊಕ್ಕವಾಗಿ ನಟಿಸಿದ ಯಜ್ನಾ ಶೆಟ್ಟಿ, ಪ್ರಥಮ ಯತ್ನದಲ್ಲಿ ಉತ್ತಮವಾಗಿ ನಟಿಸಿದ ಶೀತಲ್ ಶೆಟ್ಟಿ, ಚಿತ್ರಕಥೆಗೆ ಸೂಕ್ತವಾಗಿ ಹೆಗಲು ಕೊಟ್ಟ ದಿನೇಶ್, ರಿಶಭ್ ಹಾಗೂ ರಘು.

ಯಾಕೆ? - ಎಂಬ ಪ್ರಶ್ನೆಗೆ ಉತ್ತರ ಸಿಗದೆ ರಿಚ್ಚಿ ಸಾಯುವಲ್ಲಿ, ಪ್ರೇಕ್ಷಕನ ಯಾಕೆ-ಹೇಗೆಗಳನ್ನು ಹಾಗೆ ಉಳಿಸಿ ಉತ್ತಮವಾದ ಅಂತ್ಯವನ್ನೆ ಕಾಣಿಸಿದ್ದಾನೆ ನಿರ್ದೇಶಕ.
ಸಿನಿಮಾದ ಕೊನೆಯೇನೆಂದರೆ - ಅವರವರ ದೃಷ್ಟಿಕೋನಕ್ಕೆ, ಅವರ ಸಮಾಧಾನಕ್ಕೆ, ಅವರವರ ವಿವರಣೆ.
ಪ್ರೇಕ್ಷಕನಿಗೆ "ಅವನು ಕಂಡಂತೆ" ಅಭಿಪ್ರಾಯಪಡುವ ಅಧಿಕಾರವೂ ಇದೆ.

Friday, September 2, 2011

ಚುಕ್ಕಿ

ಹಳೆಯ ಸಂಗ್ರಹದಿಂದ ಒಂದಿಷ್ಟು ಸಾಲುಗಳು...
ಚುಕ್ಕಿ


ನೀನು,
ಬೆಳ್ಳಿ ಮೋಡದ ಬಾನಿನೊಳಗೊಂದು 
ಬಣ್ಣದ ಚಿತ್ತಾರ
ಎಲೆಯಿರದ ಬಳ್ಳಿಯಲೊಂದು 
ನಗುವ ಮೊಗ್ಗು
ಕಪ್ಪು ಕಡಲನು ಚುಂಬಿಸಿ 
ಕೆಂಪಾಗಿಸುವ ನೇಸರ

ನೀನು,
ಸುಡುವ ಮರುಭೂಮಿಯ ಪಯಣದಿ 
ತಂಗಾಳಿಯ ಸ್ಪರ್ಶ
ಕಾಲಿ ಹಾಳೆಯ ಮೇಲೆ ಅರಳಿ 
ನಿಂತಿರುವ ರಂಗೋಲಿ
ಕರಿ ಚಾದರ ಹೊದ್ದಿರುವ ಆಗಸದಲೊಂದು 
ಒಂಟಿ "ಚುಕ್ಕಿ"




======================


ಮನಸ್ಸು


ನಾ ನೋಡೊ ಕನ್ನಡಿ ಗಾಜಿನದಲ್ಲ
ನೀರ ತೆಳು ಮೈಯದು
ಗಾಜ ಒಡೆಯಬೇಕಾಗಿಲ್ಲ
ಕಲ್ಲೊಂದ ಎಸೆದರಷ್ಟೆ ಸಾಕು
ಒಣ ಎಲೆಯೊಂದು ಬಿದ್ದರಷ್ಟೆ ಆಯ್ತು
ಗಾಳಿಯ ತುಸು ಸ್ಪರ್ಶವೆ ಸಾಕು

Monday, August 22, 2011

ವಯಸ್ಸು ಮೊವತ್ತೊಂದು!


ಅನಾಮಿಕರು, ಸಹ
ಪಯಣಿಗರು
ಬಂದವರು, ಹೋದವರು
ನಿಂತು ನಕ್ಕವರು, ನೆರಳಿಗೆ
ಹೆಗಲಾದವರು
ದೂರದ ಬೆಟ್ಟಗಳು
ತೀರದ ಅಲೆಗಳು
ಮಾನಸ ಸರೋವರಗಳು
ರಹದಾರಿಯುದ್ದ ಕಾಣದ
ತಿರುವುಗಳು

ಕನಸು ಅಂಚೆ ಚೀಟಿಗಳಂತೆ
ಮನಸೋ ಬಾಲಂಗೋಚಿಯಂತೆ
ಮಾಡಿದ್ದು ಹತ್ತಾರು
ಕಂಡಿದ್ದು ಹಲವಾರು
ಉಳಿಸಿದ್ದೋ ನೂರಾರು!
ಬೇಕುಗಳ ಪಲಾಯನ
ಬಿಡಲಾರದವುಗಳ ಸಹ
ಗಮನ

ಕಣ್ಣ ತಪ್ಪಿಸಿ, ಬೆನ್ನ ತೋರಿಸಿ
ಮಾಸಿ ಮರೆತ ನೆನಪುಗಳು
ಇಷ್ಟಾದರೂ, ಮನಸ್ಸು
ಕನಸ ಕಾಣುವುದ ಬಿಟ್ಟಿಲ್ಲ
ಗಳಿಗೆಗೊಂದು
ದೇಹಕೋ,
ದಾಟಿತ್ತು ವಯಸ್ಸು ಆಗಲೆ
ಮೊವತ್ತೊಂದು

Saturday, July 2, 2011

Wednesday, May 4, 2011

ಚುಟುಕು - ಚೂರು ಗುಟುಕು




ಚುಟುಕು - ಚೂರು ಗುಟುಕು


ಹಳೆಯ ನೆನಪುಗಳು
ಕಹಿಯಾಗಿದ್ದರೆ
ಬದುಕ ಮಾಡುವುದು
ಪ್ರಸಾರ
ಕಪ್ಪು-ಬಿಳುಪು
ಸಿಹಿಯೊ?
ಸುತ್ತೆಲ್ಲ ಕಾಮನ
ಬಿಲ್ಲು

--

ಒಮ್ಮೊಮ್ಮೆ
ಕನಸ ಹಿಂದೆ
ಬಿದ್ದಾಗೆಲ್ಲ
ಅನಿಸುವುದು, ನಾನು
ನೆರಳ ಹಿಡಿಯ
ಹೊರಟ
ಬೆಳಕು
ಹತ್ತಿರ ಹೋದಂತೆಲ್ಲಾ
ಉಳಿಯುವುದು ಬರಿ
ಶೂನ್ಯ


--

ಮೌನಕೆ
ಯಾಕೊ ತಿಳಿಯದು
ಹಗಲೊಂದಿಗೆ ಮುನಿಸು
ಕತ್ತಲ ಜೊತೆ
ಸರಸವಾಡೆ
ಹುಟ್ಟಿಸುವುದು
ನೋವು

--

ಅಳಿದುದಕೆ ಕೊರಗಿ
ಬಾಡುತಿವೆ ಇಂದುಗಳು
ಹಾಗೂ ಹೀಗೂ
ಬದುಕು ಬಾಗುವತ್ತ
ಹಣೆಯಲ್ಲಿ ಕಾಗುಣಿತ
ಚಿಂತೆ ನಡೆಯುತ್ತಿದೆ
ಶೂನ್ಯವನ್ನಳಿಸುವತ್ತ